ಪ್ರತಿಯೊಬ್ಬ ವ್ಯಕ್ತಿಯನ್ನು ಬೆಸೆಯುವಲ್ಲಿ ಜಾತ್ರೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಧ್ಯಕ್ಷ ಬಸವರಾಜ ಗುಂಡಗೋವಿ ಅಬಿಪ್ರಾಯಪಟ್ಟರು.
ಧಾರವಾಡ 04: ಶನಿವಾರ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಮೇ.1 ರಿಂದ ಆರಂಭವಾಗಿರುವ ಗ್ರಾಮ ದೇವಿಯರ ಜಾತ್ರಾ ಮಹೋತ್ಸವದ ಮೂರನೇ ದಿನದಂದು ಹಮ್ಮಿಕೊಂಡಿದ್ದ ಹನಮಂತ ದೇವರ ರಥೋತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ದೇವರ ಮೇಲಿನ ನಂಬಿಕೆಯು ಪೂರ್ವಜರ ಕಾಲದಿಂದ ನಿರಂತರ ಸಾಗಿ ಬಂದಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಹಬ್ಬ, ಜಾತ್ರೆಗಳಲ್ಲಿ ಎಲ್ಲ ಧರ್ಮೀಯರು ಭಾಗವಹಿಸುವುದರಿಂದ ಸಹಭಾಳ್ವೆ ಸಾಧಿಸಲು ಪೂರಕವಾಗುತ್ತದೆ. ಜೊತೆಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಮುಖಂಡ ಕರೆಪ್ಪ ಅಮ್ಮಿನಭಾವಿ, 10 ನೇ ಶತಮಾನದಲ್ಲಿ ಚಾಲುಕ್ಯರ ಆಡಳಿತದಲ್ಲಿದ್ದ ಮನಗುಂಡಿ ಗ್ರಾಮಕ್ಕೆ ಸಾವಿರಾರು ವರ್ಷಗಳ ಪರಂಪರೆ ಇದೆ. ಗ್ರಾಮದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಿದ ದೇವಾಲಯಗಳೇ ಇವುಗಳಿಗೆ ನಿರ್ದಶನಗಳಾಗಿವೆ. ಈ ಕುರಿತು ಪ್ರಾಚ್ಯವಸ್ತು ಇಲಾಖೆಯ ಬಳಿ ಆಧಾರಗಳಿವೆ ಎಂದ ಅಮ್ಮಿನಬಾವಿ ಅವರು, ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿಯೂ ಅಧಿಕೃತ ಮಾಹಿತಿ ಇದೆ. ಅನೇಕ ಸಂಶೋಧಕರಿಂದಲೂ ಮನಗುಂಡಿ ಗ್ರಾಮದ ಇತಿಹಾಸ ದಾಖಲಾಗಿವೆ. ಇದುವರೆಗೂ ಗ್ರಾಮ ದೇವಿಯರ ಜಾತ್ರೆ ನಡೆದ ಮಾಹಿತಿ ಇಲ್ಲ. ಆದರೆ, ಮನಗುಂಡಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ದೇವಿಯರ ಜಾತ್ರೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು. ಸ್ಥಳೀಯ ವಿರಕ್ತಮಠದ ಪ.ಪೂಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಗಂಗಾಧರ ಕಲ್ಲಾಗೌಡತಿ, ಪುಂಡಲೀಕ ಜಕ್ಕನವರ, ಹಿರಿಯರಾದ ಯಲ್ಲಪ್ಪ ಹುತ್ತಕ್ಕನವರ, ಪರಮೇಶ ಸಲಗಾರ, ನಾಗಪ್ಪ ಅಮ್ಮಿನಭಾವಿ, ನಿಂಗಪ್ಪ ಸಾಲಗಟ್ಟಿ, ಗಂಗಾಧರ ರಾಜಾಪೂರ, ಕರೆಪ್ಪ ಮುಶೆಲ್ಲನವರ, ಬಸಪ್ಪ ಮೇಟಿ ವೇದಿಕೆಯಲ್ಲಿದ್ದರು. ಮಂಜುನಾಥ ಕಳ್ಳಿಮನಿ ನಿರೂಪಿಸಿದರು. ಶಿವಾನಂದ ಸಾಲಗಟ್ಟಿ ವಂದಿಸಿದರು. ಬಳಿಕ ಸಂಭ್ರಮದಿಂದ ಹನಮಂತ ದೇವರ ರಥೋತ್ಸವದ ಜರುಗಿತು.