ಸಿಂದಗಿ 14: ಕನ್ನಡ ಸಾರಸ್ವತ ಲೋಕದಲ್ಲಿ ಮಕ್ಕಳ ಸಾಹಿತ್ಯ ನಿರ್ಲಕ್ಷ್ಯಕ್ಕೊಳಗಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೂ ಮಕ್ಕಳ ಸಾಹಿತ್ಯವನ್ನು ಕಡೆಗಣಿಸಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲೆಯ ಮೂಡಲಗಿಯ ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ವಿಷಾದಿಸಿದರು.
ಪಟ್ಟಣದ ಸಾರಂಗಮಠದ ಸಭಾಮಂಟಪದಲ್ಲಿ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ, ವಿದ್ಯಾಚೇತನ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸದ್ವಿಚಾರ ಗೋಷ್ಠಿಹಿ343, ಮಹಾಪ್ರಬಂಧ ಗ್ರಂಥ ಬಿಡುಗಡೆ, ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲೇ ವಿಜಯಪುರ ಜಿಲ್ಲೆಯು ಮಕ್ಕಳ ಸಾಹಿತ್ಯದ ತೊಟ್ಟಿಲು ಎಂದು ಪ್ರಸಿದ್ಧಿ ಪಡೆದಿದೆ. ಜಿಲ್ಲೆಯ ಹರ್ಡೇಕರ ಮಂಜಪ್ಪನವರ ಬುದ್ಧಿಮಾತು ಮಕ್ಕಳ ಸಾಹಿತ್ಯ ಕೃತಿಯು 17 ಬಾರಿ ಮುದ್ರಣಗೊಂಡು ದಾಖಲೆ ಸೃಷ್ಟಿಸಿತು. ಮಕ್ಕಳ ಸಾಹಿತಿ ಶಿಶು ಸಂಗಮೇಶ ಅವರು ಮಕ್ಕಳ ಸಾಹಿತ್ಯ ಪ್ರಸಾರಕ್ಕಾಗಿ ಭಾರತೀಯ ಸಾಹಿತ್ಯ ಭಂಡಾರ ಸ್ಥಾಪಿಸಿದರು ಎಂದರು.
1978ರಲ್ಲಿ ಮಕ್ಕಳಿಗಾಗಿ ಬಾಲ ಭಾರತಿ ಪತ್ರಿಕೆ ಪ್ರಾರಂಭಿಸಲಾಯಿತು. ಕರ್ನಾಟಕ ಮಕ್ಕಳ ಸಾಹಿತ್ಯ ಅಕಾಡೆಮಿಯನ್ನೂ ಸ್ಥಾಪಿಸಲಾಯಿತು. ಮಕ್ಕಳ ಸಾಹಿತಿ ಶಂ.ಗು. ಬಿರಾದಾರ ಬರೆದ ನಾವು ಎಳೆಯರು, ನಾವು ಗೆಳೆಯರು, ಹೃದಯ ಹೂವಿನ ಮಂದಿರ’ ಗೀತೆ ತೆಲುಗು ಭಾಷೆಗೆ ಅನುವಾದಗೊಂಡ ರಾಷ್ಟ್ರ ಪ್ರಶಸ್ತಿ ಪಡೆಯಿತು ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತ ಪ.ಗು. ಸಿದ್ದಾಪುರ ಮಾತನಾಡಿ, ಪ್ರಾಯೋಜಿತ ಪ್ರಶಸ್ತಿ ಸಂಸ್ಥೆಗಳು ನಾಯಿಕೊಡೆಯಂತೆ ಮೇಲೆದ್ದಿವೆ. ಆದರೆ, ಸಿಂದಗಿಯ ವಿದ್ಯಾಚೇತನ ಪ್ರಕಾಶನ, ಮಕ್ಕಳ ಬಳಗದ ಸಂಸ್ಥಾಪಕ ಸಂಚಾಲಕ ಹ.ಮ. ಪೂಜಾರ ಅವರು ನಿವೃತ್ತಿ ವೇತನದಲ್ಲಿ ಉಳಿದ ಹಣವನ್ನು ಮಕ್ಕಳ ಸಾಹಿತ್ಯದ ಪ್ರಸಾರ, ಪ್ರಶಸ್ತಿಗಾಗಿ ನೀಡುತ್ತಿದ್ದಾರೆ ಎಂದರು.
ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ 25 ಮಕ್ಕಳ ಸಾಹಿತ್ಯ ಕೃತಿಗಳನ್ನು ಮಕ್ಕಳ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ವಿದ್ಯಾಚೇತನ ಪ್ರಕಾಶನದ ವತಿಯಿಂದ ಮಕ್ಕಳ ಸಾಹಿತ್ಯಕ್ಕೆ ಹಾಗೂ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವವರಿಗೆ ಪ್ರೋತ್ಸಾಹ ನೀಡುತ್ತಿರುವುದು ಮಕ್ಕಳ ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.
ವಿದ್ಯಾಚೇತನ ಪ್ರಕಾಶನ ಸಂಚಾಲಕ ಹ.ಮ. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಬಳಗದ ಸುವರ್ಣ ಮಹೋತ್ಸವವನ್ನು ಶೀಘ್ರದಲ್ಲೇ ಆಚರಿಸಲಾಗುವುದು. ಸಾರಂಗಮಠದ ಲಿ. ಚೆನ್ನವೀರ ಸ್ವಾಮೀಜಿ ಅವರು ಶಿಕ್ಷಣ ಸಂಸ್ಥೆ ಕಟ್ಟಿದರು. ಜ್ಞಾನ ಪ್ರಸಾರದ ಜೊತೆಗೆ ಕೃಷಿ ಚಟುವಟಿಕೆಗೆ ಮಹತ್ವ ನೀಡಿದ್ದರು. ಸಾರಂಗಮಠದ ಪೂಜ್ಯರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಶಿಕಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಪೂಜ್ಯರುಪೂಜ್ಯ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಮೂಲಕ ಜ್ಞಾನ, ಅನ್ನ ದಾಸೋಹ ಮತ್ತು ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಸಿ ಶಿಕ್ಷಣ ದಾಸೋಹ ಮಾಡುತ್ತಿದ್ದಾರೆ. ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿದ್ದು 343ನೇ ಸದ್ವಿವಿಚಾರ ಗೋಷ್ಠಿಯಲ್ಲಿ ವಿಜಯಪುರ ಜಿಲ್ಲೆಯ ಮಕ್ಕಳ ಸಾಹಿತ್ಯ ವಿಷಯ ಕುರಿತು ಉಪನ್ಯಾಸ ನೀಡಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪನ್ಯಾಸಕಿ ಸುಧಾರಾಣಿ ಮಣೂರ ಅವರ ಮಹಾಪ್ರಬಂಧ ಪ.ಗು. ಸಿದ್ದಾಪುರ ಜೀವನ ಮತ್ತು ಸಾಹಿತ್ಯ ಗ್ರಂಥವನ್ನು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು.
ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎಂ.ಎಚ್. ಲೋಣಿ, ಜಿ.ಜಿ. ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಅವರು ಪ್ರಶಸ್ತಿ ಫಲಕವನ್ನು ವಾಚಿಸಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಶರಣು ಜೋಗೂರ, ಡಾ.ಜಿ.ಎಸ್. ಭೂಸಗೊಂಡ, ರಾಜಶೇಖರ ಪೂಜಾರಿ, ಸಿದ್ದಬಸವ ಕುಂಬಾರ, ವಿ.ಡಿ. ವಸ್ತ್ರದ, ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ, ಎಂ.ಎಸ್. ಹೈಯಾಳಕರ, ವಿ.ಡಿ. ಪಾಟೀಲ, ಎಸ್.ಕೆ. ಗುಗ್ಗರಿ, ಪೂಜಾ ಹಿರೇಮಠ, ಸುಧಾರಾಣಿ ಮಣೂರ ಇದ್ದರು.
ಪ್ರಶಸ್ತಿ ಪ್ರದಾನ
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ಅವರಿಗೆ ಸಾರಂಗಮಠದ ಪೀಠಾಧ್ಯಕ್ಷ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅವರು ಮಕ್ಕಳ ಸಾಹಿತ್ಯ ಭೂಷಣ ಪ್ರಶಸ್ತಿ ಪ್ರದಾನ ಮಾಡಿದರು. 15 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಪುಷ್ಪವೃಷ್ಟಿಯೊಂದಿಗೆ ಅವರನ್ನು ಗೌರವಿಸಲಾಯಿತು. ಪ್ರಶಸ್ತಿಯ ನಗದನ್ನು ಮಕ್ಕಳ ಸಾಹಿತ್ಯ ಕೃಷಿ ಕಾರ್ಯಕ್ಕಾಗಿ ವಿದ್ಯಾಚೇತನ ಪ್ರಕಾಶನಕ್ಕೆ ಮರಳಿಸಿದರು.