ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಚಾಲನೆ

Comprehensive survey of Scheduled Castes launched

ಲೋಕದರ್ಶನ ವರದಿ 

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಚಾಲನೆ 

ನಿಖರವಾದ ಮಾಹಿತಿ ನೀಡಿ ಸಮೀಕ್ಷೆಗೆ ಸಹಕರಿಸಿ - ಜಿಲ್ಲಾಧಿಕಾರಿ ನಲಿನ ಅತುಲ್ 

ಕೊಪ್ಪಳ 05: ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸಲು ಕೈಗೊಳ್ಳಲಾಗುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗಾಗಿ ಗಣತಿದಾರರು (ಸಮೀಕ್ಷಾಕಾರರು) ನಿಮ್ಮ ಮನೆಗೆ ಬಂದಾಗ ಸಾರ್ವಜನಿಕರು ಅವರಿಗೆ ಸಹಕರಿಸುವ ಮೂಲಕ ನಿಖರವಾದ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ನಲಿನ ಅತುಲ್ ಹೇಳಿದರು. 

ಅವರು ಸೋಮವಾರ ಕೊಪ್ಪಳ ನಗರದ 12ನೇ ವಾರ್ಡಿನ ಬಸವೇಶ್ವರ ನಗರದಲ್ಲಿ ಪೌರಕಾರ್ಮಿಕರಾದ ಶಾಂತ ಗಂಡ ಗಾಳೆಪ್ಪ ದೊಡ್ಡಮನಿ ಹಾಗೂ ಸೌರಮ್ಮ ಗಂಡ ಭರಮಪ್ಪ ಅವರ ಮನೆಯಿಂದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಮೊಬೈಲ್ ಆ್ಯಪ್ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಸರಿ ಸುಮಾರು 16 ಲಕ್ಷಕ್ಕಿಂತಲೂ ಹೆಚ್ಚಿನ ಜನ ಸಂಖ್ಯೆ ನಮ್ಮ ಕೊಪ್ಪಳ ಜಿಲ್ಲೆಯಲ್ಲಿದೆ. ಪ್ರತಿಯೊಂದು ಮನೆಗೆ ತೆರಳಿ ಸಮೀಕ್ಷೆ ಮಾಡಬೇಕೆಂಬ ಸರ್ಕಾರವು ನಿರ್ದೇಶನ ಮಾಡಿದ್ದು, ಇಂದಿನಿಂದ ಈ ಸಮೀಕ್ಷೆ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಈ ಸಮೀಕ್ಷೆಯನ್ನು ಸಮರ​‍್ಕವಾಗಿ ಕೈಗೊಳ್ಳಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿದ್ದು, ಸಮೀಕ್ಷೆಗಾಗಿ ಒಂದು ಮತಗಟ್ಟೆ ಒಬ್ಬರಂತೆ ಒಟ್ಟು 1315 ಗಣತಿದಾರರನ್ನು ಜಿಲ್ಲೆಯಲ್ಲಿ ನೇಮಕ ಮಾಡಲಾಗಿದೆ. ಸಮೀಕ್ಷೆಗೆ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರಗಳು ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದಿದ್ದು, ತಾಲ್ಲೂಕು ಮಟ್ಟದ ಮಾಸ್ಟರ್ ಟ್ರೈನರಗಳಿಗೆ ಹಾಗೂ 250 ರಿಂದ 300 ಶಿಕ್ಷಕರಿಗೆ ಗಣತಿದಾರರ ತರಬೇತಿ ನೀಡಲಾಗಿದ್ದು, ಈ ಸಮೀಕ್ಷೆಯನ್ನು ಆ್ಯಪ್ ಮೂಲಕ ನಡೆಸಲಾಗುತ್ತಿದೆ ಎಂದರು. 

ಸಮೀಕ್ಷೆಯು 2025ರ ಮೇ 5 ರಿಂದ 17ರ ವರೆಗೆ ಮೊದಲನೇ ಹಂತದಲ್ಲಿ ಮನೆ-ಮನೆಗೆ ಸಮೀಕ್ಷೆ ಹಾಗೂ ಮೇ 19 ರಿಂದ 21ರ ವರೆಗೆ ಎರಡನೇ ಹಂತದಲ್ಲಿ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಮತ್ತು ಮೇ 19 ರಿಂದ 23ರ ವರೆಗೆ ಮೂರನೇ ಹಂತದಲ್ಲಿ ಆನ್‌ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶವಿರುತ್ತದೆ. ಜಿಲ್ಲೆಯ ಪ್ರತಿಯೊಂದು ಮನೆಯ ಸಮೀಕ್ಷೆ ಮಾಡುವ ಗುರಿಯನ್ನು ಹೊಂದಲಾಗಿದೆ.  ಈ ಒಂದು ಸಮೀಕ್ಷೆಯಲ್ಲಿ ನಾವೂ ನಿಖರವಾದ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ಒಪ್ಪಿಸುತ್ತೇವೆ. ಆಧಾರ್ ಕಾರ್ಡ್‌ ಅಥವಾ ರೇಷನ್ ಕಾರ್ಡ್‌ ಈ ಎರಡರಲ್ಲಿ ಯಾವುದಾದರು ಒಂದರ ಮುಖಾಂತರವೇ ಮಾಹಿತಿಯನ್ನ ಸಂಗ್ರಹಿಸಲಾಗುತ್ತದೆ. ಜಿಲ್ಲೆಯ ಸಾರ್ವಜನಿಕರು ಸಮೀಕ್ಷೆಯ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ಗಣತಿದಾರರಾದ ವಿರೂಪಾಕ್ಷಪ್ಪ ಬಾಗೋಡಿ, ಮಾಸ್ಟರ್ ಟ್ರೈನರ್ ಶರಣಪ್ಪ ಮಾಗಳದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಸವೇಶ್ವರ ನಗರದ ಸಾರ್ವಜನಿಕರು ಉಪಸ್ಥಿತರಿದ್ದರು.