ಶಾಂತಿ, ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸಿ: ಸಿಪಿಐ ಫಸಿಯುದ್ದೀನ
ತಾಳಿಕೋಟಿ 05: ಪಟ್ಟಣದಲ್ಲಿ ಜೂನ್ 7ರಂದು ಆಚರಿಸಲಾಗುತ್ತಿರುವ ಬಕ್ರೀದ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಯುದ್ದೀನ ತಿಳಿಸಿದರು. ಪಟ್ಟಣದ ಪೊಲೀಸ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ಯ ಬುಧವಾರ ಹಮ್ಮಿಕೊಂಡ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾವಹಿಸಲು ಗುರುವಾರದಿಂದಲೇ ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಲಾಗುತ್ತಿದೆ, ಹಬ್ಬದ ಎಲ್ಲ ಪ್ರಕ್ರಿಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡು ಆಚರಿಸಲು ಪ್ರಯತ್ನಿಸಬೇಕು. ಮುಸ್ಲೀಮ ಬಾಂಧವರು ಸಾಮೂಹಿಕ ಪ್ರಾರ್ಥನೆಗೆ ಈದ್ಗಾ ತೆರಳುವಾಗ ರಸ್ತೆ ಶಿಷ್ಟಾಚಾರಗಳನ್ನು ಪಾಲಿಸಿಕೊಂಡು ಯಾರಿಗೂ ತೊಂದರೆ ಆಗದಂತೆ ಹೋಗಬೇಕು. ಇದಗಾದಲ್ಲಿ ಶಾಂತ ರೀತಿಯಿಂದ ಪ್ರಾರ್ಥನೆ ಸಲ್ಲಿಸಿ ನಂತರ ತಮ್ಮ ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಹಬ್ಬವನ್ನು ಆಚರಿಸಬೇಕು ಎಂದರು. ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ ತಾಳಿಕೋಟಿ ಪಟ್ಟಣವು ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ ಇಲ್ಲಿ ನಾವೆಲ್ಲರೂ ಸೇರಿಕೊಂಡು ಎಲ್ಲ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದೇವೆ, ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶಾಂತರೀತಿಯಿಂದ ಆಚರಿಸುವಂತಾಗಲು ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದರು. ಮುಸ್ಲಿಂ ಮುಖಂಡ ಮೋದಿನಸಾ ನಗಾರ್ಚಿ ಮಾತನಾಡಿ ಪಟ್ಟಣದಲ್ಲಿ ಸರ್ವಧರ್ಮಮೀಯರು ಒಂದಾಗಿ ಹಬ್ಬಗಳನ್ನು ಆಚರಿಸುತ್ತಿದ್ದೇವೆ ನಮ್ಮೆಲ್ಲರ ಪ್ರಯತ್ನದಿಂದಾಗಿ ಪಟ್ಟಣದಲ್ಲಿ ಇಂದು ಶಾಂತಿ ನೆಲಸಿದೆ ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಪಿಎಸ್ಐ ರಾಮನಗೌಡ ಸಂಕನಾಳ ಮಾತನಾಡಿ ಪಟ್ಟಣದಲ್ಲಿ ಜೂನ್ 7ರಂದು ಆಚರಿಸಲ್ಪಡುವ ಬಕ್ರೀದ್ ಹಬ್ಬವು ಶಾಂತಿಯುತವಾಗಿ ನಡೆಯುವಂತಾಗಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು. ಶಾಂತಿ ಸಭೆಯಲ್ಲಿ ಪಟ್ಟಣದ ಗಣ್ಯರಾದ ಶಶಿಧರ ಡಿಸಲೆ, ಹುಸೇನ ಸಾಬ ಜಮಾದಾರ, ಜಾವೇದ ಕೆಂಭಾವಿ, ಎಂ.ಎಚ್.ಕೆಂಭಾವಿ, ಪೀರ ಮೊಹಮ್ಮದ್ ಖಾಜಿ,ಶಫೀಕ ಇನಾಮದಾರ, ಆಸಿಫ್ ಕೆಂಭಾವಿ,ನದೀಮ ಕಡು ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.