ಪರೀಕ್ಷೆಯ ಕೊನೆಯದಿನ ಕಾಲೇಜಿಗೆ ಸಲ್ಯೂಟ್ ಹೊಡೆದ ವಿದ್ಯಾರ್ಥಿಗಳು

ಪರೀಕ್ಷೆಯ ಕೊನೆಯದಿನ ಕಾಲೇಜಿಗೆ ಸಲ್ಯೂಟ್ ಹೊಡೆದ ವಿದ್ಯಾರ್ಥಿಗಳು Students salute the college on the last day of exams

ಲೋಕದರ್ಶನ ವರದಿ

ಮಹಾಲಿಂಗಪುರ 09:  ಇಂದಿನ ಹೊಸ ತಲೆಮಾರಿನ ವಿದ್ಯಾರ್ಥಿಗಳು ತರಗತಿ ಮುಗಿದ ಮೇಲೆ ಮನೆಗೆ ಪರಾರಿ, ಸಿಲ್ಯಾಬಸ್ ಮುಗಿದ ಮೇಲೆ ಪರೀಕ್ಷಾ ತಯಾರಿ, ಪರೀಕ್ಷೆ ಮುಗಿದ ಮೇಲೆ ಜಾಲಿಯಿಂದ ಜಯಭೇರಿ ಆಚರಿಸುವ ಟ್ರೆಂಡ್ ಹುಟ್ಟು ಹಾಕಿದ್ದಾರೆ. ಕೆಲವೆಡೆ ಪರೀಕ್ಷೆ ಮುಗಿದ ಮೇಲೆ ಕಾಲೇಜು ಗೇಟ್ ಮುಂದೆ ಪಟಾಕಿ ಸಿಡಿಸಿ, ಗುಲಾಲ ಎರಚಿ, ಕೊರಳಲ್ಲಿನ ಐಡಿ ಕಾರ್ಡ್‌ ಹಾರಿಸಿ ರೀಲ್ಸ್‌ ಮಾಡಿ ಶೇರ್ ಮಾಡುವ ಮೂಲಕ ಕಾಲೇಜಿನ ಕೊನೆಯ ದಿನಗಳನ್ನು ಎಂಜಾಯ್ ಮಾಡುವ ಮೂಡ್ ಕಂಡು ಬರುತ್ತದೆ. ಆದರೆ ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಪದವಿ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಸೋಮವಾರ ತಮ್ಮ ಕೊನೆಯ ಪರೀಕ್ಷೆ ಬರೆದು ಕಾಲೇಜಿನಿಂದ ಹೊರ ನಡೆಯುವಾಗ ಸ್ನೇಹಿತರು ಪರಸ್ಪರ ಆಟೋಗ್ರಾಫ್ ಬರೆಸಿಕೊಳ್ಳುವ ಮೂಲಕ ನೆನಪಿನ ಅಚ್ಚು ಹಾಕಿಸಿಕೊಂಡರು.

ಅಲ್ಲದೇ ಮೂರು ವರ್ಷ ತಮಗೆ ಪದವಿ ಜ್ಞಾನ ನೀಡಿದ ಸಂಸ್ಥೆಗೆ ಭಕ್ತಿಯಿಂದ ಸಲ್ಯೂಟ್ ಹೊಡೆಯುವ ಮೂಲಕ ಕಾಲೇಜಿನ ಕೊನೆಯ ದಿನಕ್ಕೆ ನಮೃತೆಯ ನಮನ ಸಲ್ಲಿಸಿದರು. ಕೊನೆಯ ದಿನವನ್ನು ಕಾಲೇಜಿನ ಪೀಠೋಪಕರಣ ಹಾಳು ಮಾಡಿ, ಸಾಮಗ್ರಿಗಳನ್ನು ತೂರಾಡಿ, ಚೀರಾಡಿ, ಎಗರಾಡಿ ವಿಕೃತಿಯಿಂದ ಆಚರಿಸುವವರು ಬೇರೆ ಕಡೆ ಸಿಗುತ್ತಾರೆ. ಆದರೆ ಕಲಿಯುವಾಗ ಎಷ್ಟೇ ಮೋಜು ಮಸ್ತಿ ಮಾಡಿದರೂ ವಿದಾಯ ಹೇಳುವಾಗ ಭಾವುಕರಾಗಿ ಈ ಕಾಲೇಜಿನ ಸಮಾಜಶಾಸ್ತ್ರ ವಿದ್ಯಾರ್ಥಿಗಳು ಕಲಿತ ಕಾಲೇಜಿಗೆ ಸಾಮೂಹಿಕವಾಗಿ ಸಲ್ಯೂಟ್ ಹೊಡೆಯುವ ಮೂಲಕ ಸಂಭ್ರಮ ಆಚರಿಸಿದ್ದು ಮಾದರಿಯಾಗಿತ್ತು. ವಿದ್ಯಾರ್ಥಿಗಳ ನಮೃತೆಯ ನಡೆಯನ್ನು ಪ್ರಾಚಾರ್ಯ ಎನ್‌.ಬಿ.ಪಾಟೀಲ ಶ್ಲಾಘಿಸಿದ್ದಾರೆ.  ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಪದವಿ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕೊನೆಯದಿನ ಕಾಲೇಜಿಗೆ ಸಲ್ಯೂಟ್ ಹೊಡೆದು ನಮನ ಸಲ್ಲಿಸಿದರು.